ಚಿಕ್ಕಬಳ್ಳಾಪುರ : ಅತಿಥಿ ಉಪನ್ಯಾಸಕರ ಹಿತ ಕಾಯುವ ದೃಷ್ಟಿಯಿಂದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ವಿಶೇಷ ಕಾಯಿದೆಯನ್ನು ರೂಪಿಸಿ ಅತಿಥಿ ಉಪನ್ಯಾಸಕರ ಬಾಳಿಗೆ ಬೆಳಕಾಗಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಮುನಿರಾಜು ಆಗ್ರಹಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಸರ್ಕಾರವನ್ನು ಒತ್ತಾಯಿಸಿ ಹಕ್ಕುಗಳನ್ನು ಈಡೇರಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಥಾ ನಡೆಸಿದ ಅತಿಥಿ ಉಪನ್ಯಾಸಕರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಮುನಿರಾಜು ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ 2025 -26ನೇ ಶೈಕ್ಷಣಿಕ ಶಾಲೆಗೆ ಸಂಬಂಧಪಟ್ಟಂತೆ ಅತಿಥಿ ಉಪನ್ಯಾಸಕರ ನೇಮಕಾತಿ ಯನ್ನು ಯುಜಿಸಿ ನಿಯಮಾವಳಿಯಂತೆ ಮಾಡುತ್ತಿರುವುದು ಸರಿಯಲ್ಲ.
ಹೀಗಾದಲ್ಲಿ 6904 ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುವಂತಾಗುತ್ತದೆ. ಹೀಗಾಗಿ ಕೂಡಲೇ ಕಾಲೇಜಿ ಶಿಕ್ಷಣ ಇಲಾಖೆ ಈ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಅತಿಥಿ ಉಪನ್ಯಾಸಕರ ಆಯ್ಕೆ ಎಂಬ ಪ್ರಕ್ರಿಯೆ 2004-05 ರಿಂದ ಪ್ರಾರಂಭವಾಯಿತು. ಆಗ ಕಾಲೇಜಿನ ಇಲಾಖೆ ಸ್ನಾತಕೋತರ ಪದವಿ ಪಡೆದ ಎಲ್ಲರಿಗೂ ಪದವಿ ಕಾಲೇಜುಗಳಲ್ಲಿ ಪಾಠ ಬೋಧನೆ ಮಾಡಲು ಅವಕಾಶ ನೀಡಿತ್ತು. ಆಗ ಯಾವುದೇ ಯುಜಿಸಿ ನಿಯಮಾವಳಿಗಳನ್ನು ಪಾಲಿಸಿರಲಿಲ್ಲ. ಹೀಗೆ ಕೆಲಸ ಮಾಡಿದವರಲ್ಲಿ ಬಹುತೇಕರು 15, 18, 22 ವರ್ಷಗಳ ಕಾಲ ಕನಿಷ್ಠ ಗೌರವಧನ ಪಡೆದು ಸೇವೆ ಸಲ್ಲಿಸಿದ್ದಾರೆ. ಹೀಗೆ ಸೇವೆ ಸಲ್ಲಿಸುತ್ತಲೇ ವಯೋಮಿತಿ ಕಳೆದುಕೊಂಡಿದ್ದಲ್ಲದೆ, ಕೌಟುಂಬಿಕ ಜಂಜಾಟದಲ್ಲಿ ಅನಾರೋಗ್ಯ ತುತ್ತಾಗಿದ್ದಾರೆ.
ತಾವೇ ಪಾಠ ಮಾಡಿದ ಶಿಷ್ಯಂದಿರ ಜೊತೆ ಅನಾರೋಗ್ಯಕರ ಸ್ಪರ್ಧೆ ಎದುರಿಸುವಂತೆ ಆಗಿದೆ. ಇಂತಹ ಹೊತ್ತಲ್ಲಿ ಯುಜಿಸಿ ನಿಯಮಾವಳಿಯನ್ನು ಮುಂದೆ ಮಾಡಿ ಕೆಲಸದಿಂದ ತೆಗೆಯುವುದು ಸರಿಯಲ್ಲ. ಸರ್ಕಾರ ಮಾನವೀಯತೆ ಆಧಾರದ ಮೇಲೆ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಅವಕಾಶ ಕಲ್ಪಿಸಿ ಕೊಡಬೇಕು. ಇದಕ್ಕಾಗಿ ವಿಶೇಷ ನಿಯಮಾವಳಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ರಾಜಶೇಖರ, ಸದಾಶಿವ ಆರಾಧ್ಯ, ವೆಂಕಟರೋಣಪ್ಪ, ನರಸಿಂಹಮೂರ್ತಿ, ಜಯಚಂದ್ರ, ಜಿ. ವೈ.ರಘು, ರಾಘವೇಂದ್ರ, ಅಶ್ವಥ್ ನಾರಾಯಣ, ಕೆಂಜಿಮಲೆ ಶ್ರೀನಿವಾಸ್, ಡಾಕ್ಟರ್ ಶಿವಣ್ಣ, ಡಿವಿ ಶ್ರೀನಿವಾಸ್, ಉಪನ್ಯಾಸಕಿಯರಾದ ಅರುಣ, ಗೀತಾ, ಮತ್ತಿತರರು ಇದ್ದರು
